ಪದಚ್ಯುತಿ: ಅಕಾಡೆಮಿ ಅಧ್ಯಕ್ಷರು ನ್ಯಾಯಾಲಯಕ್ಕೆ
ಲೇಖಕರು : ಉದಯವಾಣಿ
ಶುಕ್ರವಾರ, ಜುಲೈ 26 , 2013
|
ಮಂಗಳೂರು: ಅಕಾಡೆಮಿ ಸ್ವಾಯತ್ತ ಸಂಸ್ಥೆಯಾಗಿದ್ದು, ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅಕಾಡೆಮಿ ಅಧ್ಯಕ್ಷರನ್ನು ಪದಮುಕ್ತಗೊಳಿಸುವುದು ನ್ಯಾಯ ಸಮ್ಮತವಲ್ಲ. ಈ ನಿಟ್ಟಿನಲ್ಲಿ ಅಕಾಡೆಮಿ ಬೈಲಾ ಉಲ್ಲಂ ಸಿ, ವಜಾಗೊಳಿಸಿರುವುದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೇವೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ತಿಳಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.
ಬೈಲಾ ಉಲ್ಲಂಘನೆ
ಸರಕಾರ ಬೈಲಾ ಒದಗಿಸಿದ್ದು, ಅಕಾಡೆಮಿಗಳ ಅಧ್ಯಕ್ಷರು ಮೂರು ವರ್ಷ ಪದಧಾರಣೆ ಮಾಡತಕ್ಕದ್ದು ಎಂದು ಬೈಲಾದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಆದರೆ ಇದೀಗ ಬೈಲಾ ಉಲ್ಲಂಘನೆ ಮಾಡಿ ಆದೇಶ ಹೊರಡಿಸಿರುವ ಸರಕಾರ ಯಾವ ಕಾರಣಕ್ಕೆ ರಾಜೀನಾಮೆ ಕೇಳಿದೆ ಮತ್ತು ವಜಾ ಮಾಡಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದರಿಂದ ಪದಚ್ಯುತಿ ಪ್ರಶ್ನಿಸಿ ಬ್ಯಾರಿ ಸಾಹಿತ್ಯ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ, ಲಲಿತಕಲಾ ಅಕಾಡೆಮಿ ಪದಮುಕ್ತಗೊಂಡ ಅಧ್ಯಕ್ಷರು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ವಿವಾದ ಇತ್ಯರ್ಥವಾಗುವ ತನಕ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ ಎಂದರು.
ಸರಕಾರದ ನಿಲುವು ಸರಿಯಿಲ್ಲ
|
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ
|
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಪಡೆಯಲಾಗಿತ್ತಾದರೂ ಬಳಿಕ ಸ್ವಾಯತ್ತ ಸಂಸ್ಥೆಯಾದ ಅಕಾಡೆಮಿಗಳ ಕುರಿತು ಸರಕಾರ ತೆಗೆದುಕೊಂಡ ನಿಲುವು ಸರಿಯಲ್ಲ ಎಂಬ ವಾದ ಮನಗಂಡು ಎಲ್ಲ ಅಧ್ಯಕ್ಷರಿಗೂ ಅವಧಿ ಪೂರ್ಣಗೊಳಿಸಲು ಅಂದಿನ ಸರಕಾರ ತಿಳಿಸಿತ್ತು. ಅಕಾಡೆಮಿ ಅಧ್ಯಕ್ಷರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು ಎಂಬ ನಿಯಮ ಬೈಲಾದಲ್ಲಿ ಇಲ್ಲ. ಎಲ್ಲ ಅಧ್ಯಕ್ಷರನ್ನು ಅವರ ಅರ್ಹತೆ ಆಧಾರದಲ್ಲಿ ನೇಮಿಸಲಾಗಿದೆ ಎಂದರು.
ನಿಗಮ ಮಂಡಳಿ ಅಧ್ಯಕ್ಷರ ರಾಜೀನಾಮೆ ಕೇಳಿದ ಪತ್ರವನ್ನೇ ಅಕಾಡೆಮಿ ಅಧ್ಯಕ್ಷರಿಗೂ ಕಳುಹಿಸಲಾಗಿತ್ತು. ಇದು ಸರಿಯಲ್ಲ ಎಂದು ಸ್ವತಃ ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿದ್ದಾರೆ. ಅಕಾಡೆಮಿ ಅಧ್ಯಕ್ಷರಾಗಿ ಸರ್ಕಾರ ತಮ್ಮನ್ನು ಮೂರು ವರ್ಷಗಳ ಅವಧಿಗೆ ನೇಮಿಸಿದೆ. ಅಧ್ಯಕ್ಷರ ಸಾಧನೆ ಗುರುತಿಸಿ ಸರಕಾರ ನೇಮಕ ಮಾಡಿದೆ ಎಂದರು.
ನಾವು ಸ್ಥಾನದಲ್ಲಿ ಕುಳಿತುಕೊಳ್ಳುವ ಉದ್ದೇಶದಿಂದ ಹೋರಾಟ ನಡೆಸುತ್ತಿಲ್ಲ. ಆದರೆ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಸಿಗಬೇಕಾದ ಗೌರವ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರದ ಕ್ರಮ ಪ್ರಶ್ನಿಸಿದ್ದೇವೆ. ಅಧ್ಯಕ್ಷರು ಅಕಾಡೆಮಿಗಳಲ್ಲಿ ಮುಂದುವರಿಯಬಹುದು ಎಂದು ಕೋರ್ಟ್ ಆದೇಶ ನೀಡಿದಲ್ಲಿ ಮರುದಿನವೇ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಹೀಂ ಉಚ್ಚಿಲ್ ತಿಳಿಸಿದರು.
ಕೃಪೆ : http://udayavani.com
|
|
|